October 10, 2007

ಅಲವರಿಕೆಯ ಗಂಡನಿಗೆ … (ಉತ್ತರ ಕನ್ನಡದ ಗಾದೆ – 37 ಮತ್ತು 38)

ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.

ಅವನು ಕಿರಿಕಿರಿ ಮಾಡುತ್ತಿದ್ದ ಗಂಡ. ಅವನು ಸತ್ತಾಗ ಅವಳು ಒಲ್ಲದ ಮನಸ್ಸಿನಿಂದ ಬಾಯಿಬಡಿದುಕೊಳ್ಳುತ್ತಾಳೆ.
ಇಡೀ ಕೈಯ್ಯಾನ್ನೂ ಕೂಡ ಉಪಯೋಗಿಸುವ ಮನಸ್ಸಿಲ್ಲ ಅವಳಿಗೆ.
ಅವನು ಸತ್ತಿದ್ದಾನೆ; ಬಾಯಿ ಬಡಿದುಕೊಳ್ಳದೇ ಬೇರೆ ದಾರಿಯಿಲ್ಲ.
ಅದಕ್ಕಾಗಿ ತುದಿ ಕೈಯ್ಯಲ್ಲಿಯೇ ಬಾಯಿ ಬಡಿದುಕೊಂಡು ಮುಗಿಸುತ್ತಾಳೆ.

ನೀವು ಯಾರಿಗಾದರೂ ಇಷ್ಟವಿಲ್ಲದ ಕೆಲಸ ಹೇಳಿದಾಗ ಅವರು ಅದನ್ನು
ಒಲ್ಲದ ಮನಸ್ಸಿನಿಂದ ಹೇಗೆ ಹೇಗೋ ಅಂತೂ ಮಾಡಿ ಮುಗಿಸಿದಾಗ ಈ ಮಾತನ್ನು ಹೇಳಿ!

ಇದಕ್ಕೆ ಬದಲಾಗಿ ನೀವು ಹೇಳಬಹುದಾದಂತಹ ಇನ್ನೊಂದು ಗಾದೆ- ಕಟಕಟೆಯ ದೇವರಿಗೆ ಮರದ ಜಾಗಟೆ.
ಅವನು ಕಿರಿಕಿರಿ ಮಾಡುವ ದೇವರು. ಆದರೂ ಅವನ ಪೂಜೆಗೆ ಜಾಗಟೆ ಬಾರಿಸುವುದು ಅನಿವಾರ್ಯ.
ಲೋಹದ ಜಾಗಟೆ ಬಾರಿಸಲು ಮನಸ್ಸಿಲ್ಲದೇ ಮರದ ಜಾಗಟೆಯಲ್ಲಿಯೇ ಪೂಜೆ ಮುಗಿಸಲಾಗುತ್ತದೆ.

No comments: