October 24, 2007

ಬಡವ ದೇವರನ್ನು … (ಉತ್ತರ ಕನ್ನಡದ ಗಾದೆ – 53 ಮತ್ತು 54)

ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.

ಹುಬ್ಬು ಹಾರಿಸುವುದು ಎಂದರೆ ಮಾತನಾಡದೆಯೇ 'ಏನು' ಎಂದು ಕೇಳುವುದು.
ದೇವರು ಬಡವ ಎಂದು ಗೊತ್ತಾದರೆ ಅವನ ಎದುರಿನಲ್ಲಿ ಇಟ್ಟಿರುವ ಬಿಲ್ವ ಪತ್ರೆಯೂ ಕೂಡ ಸೊಕ್ಕಿನಿಂದ 'ಏನು' ಎಂದು ದೇವರನ್ನು ಪ್ರಶ್ನಿಸುತ್ತದೆ, ಹುಬ್ಬು ಹಾರಿಸುವ ಮೂಲಕ.

ಮೆತ್ತಗಿರುವವರನ್ನು ಕಂಡರೆ ಎಂಥ ಯೋಗ್ಯತೆ ಇಲ್ಲದವರೂ ಕೂಡ ಕೀಳಾಗಿ ನೋಡಲು ಪ್ರಯತ್ನಿಸುತ್ತಾರೆ ಎಂಬ ಅರ್ಥವನ್ನು ಕೊಡುತ್ತದ ಈ ಗಾದೆ.

ಸಾಮಾನ್ಯವಾಗಿ ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತೆಂದರೆ ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ. ಮಣ್ಣನ್ನು ಅಗೆಯಲು ಹೊರಟಾಗ ಎಲ್ಲರೂ ಮೆತ್ತಗಿರುವ ಜಾಗವನ್ನು ಹುಡುಕುತ್ತಾರೆಯೇ ವಿನಹ ಗಟ್ಟಿಯಿರುವ ಜಾಗವನ್ನಲ್ಲ. ಎಲ್ಲಿ ಮಣ್ಣು ಮೆತ್ತಗಿದೆಯೋ ಅಲ್ಲಿಯೇ ಮತ್ತೊಂದು ಗುದ್ದಲಿ ಮಣ್ಣನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ.
ಅಂತೆಯೇ ಮೆತ್ತಗಿರುವ ಮನುಷ್ಯನಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

No comments: